ಹಿರಿಯ ಯಕ್ಷಗಾನ ಕಲಾವಿದರ ನೆರವಿಗೆ ಸರಕಾರ ಮುಂದಾಗಲಿ: ಶಿರೂರು ಶ್ರೀ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 9 , 2013
|
ನವ೦ಬರ್ 9 , 2013
|
ಹಿರಿಯ ಯಕ್ಷಗಾನ ಕಲಾವಿದರ ನೆರವಿಗೆ ಸರಕಾರ ಮುಂದಾಗಲಿ: ಶಿರೂರು ಶ್ರೀ
ಉಡುಪಿ :
ಯಕ್ಷಗಾನ ಬಣ್ಣದ ಬದುಕು ಕಷ್ಟಕರವಾಗಿದ್ದು, ಕಲಾವಿದರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸಂಘಟನೆಗಳು ಹಾಗೂ ಸರಕಾರ ಹಿರಿಯ ಯಕ್ಷಗಾನ ಕಲಾವಿದರಿಗೆ ನೆರವು ನೀಡಲು ಮುಂದಾಗಬೇಕು ಎಂದು ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್ ' ರಂಗಸ್ಥಳ' ವತಿಯಿಂದ ಪುರಭವನದಲ್ಲಿ ಶನಿವಾರ ಹಮ್ಮಿಕೊಂಡ ದಿ. ಕೆ. ಸುಂದರ ಶೆಟ್ಟಿ ಸಂಸ್ಮರಣೆ ಹಾಗೂ ಯಕ್ಷಗಾನದ ಇಬ್ಬರು ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಯೌವನ ಕಾಲದಲ್ಲಿ ಕಲೆಗಾಗಿ ತನ್ನನ್ನು ಅರ್ಪಿಸಿಕೊಂಡ ಕಲಾವಿದರು ತಮ್ಮ ನಿವೃತ್ತಿ ಜೀವನದಲ್ಲಿ ಬಹಳ ಕಷ್ಟಕ್ಕೆ ಬದುಕು ಸಾಗಿಸುತ್ತಿದ್ದಾರೆ. ಆದ್ದರಿಂದ ಸಂಘಟನೆಗಳು ಹಾಗೂ ಸರಕಾರ ಸಮಯೋಚಿತವಾಗಿ ಕಲಾವಿದರ ನೆರವಿಗೆ ನಿಂತು ಅವರು ತಮ್ಮ ಕೊನೆಗಾಲದಲ್ಲಿ ಶಾಂತಿಯುತ ಬದುಕನ್ನು ಸಾಗಿಸಲು ಅನುವು ಮಾಡಿಕೊಡಬೇಕು ಎಂದು ಶ್ರೀಗಳು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ದಿ. ಕೆ. ಸುಂದರ ಶೆಟ್ಟಿ ಅವರಂತಹ ಹಿರಿಯರ ವ್ಯಕ್ತಿತ್ವವನ್ನು ಸಮಾಜದಲ್ಲಿ ಬಿಂಬಿಸುವ ಕೆಲಸ ಮಾಡಿದರೆ ಯುವಪೀಳಿಗೆಗೆ ಪ್ರೇರಣೆಯಾಗಲಿದೆ. ಕಥಕ್ಕಳಿಯಂತೆ ಯಕ್ಷಗಾನಕ್ಕೂ ಮಾನ್ಯತೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಹಿಂದಿ, ಆಂಗ್ಲಭಾಷೆಗೆ ಅನುವಾದಗೊಂಡು ದೆಹಲಿಯಲ್ಲಿಯೂ ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸಂಸ್ಥೆಯ ಆಡಳಿತ ಟ್ರಸ್ಟಿ ಯು.ಆರ್. ಸಭಾಪತಿ ಮಾತನಾಡಿ, ಮುಂದಿನ ವರ್ಷದಲ್ಲಿ ರಂಗಸ್ಥಳದ ಕಾರ್ಯಚಟುವಟಿಕೆಗಳು ದ.ಕ. ಜಿಲ್ಲೆಗೂ ವಿಸ್ತರಿಸಲಿವೆ. ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಮಂಗಳೂರಿನಲ್ಲಿ ಪ್ರತಿ ತಿಂಗಳಿಗೆ ಎರಡರಂತೆ 24 ಕಾರ್ಯಕ್ರಮಗಳನ್ನು ಸಂಘಟನೆ ಹಮ್ಮಿಕೊಳ್ಳಲಿದೆ. ಸಂಘಟನೆಯ ಕಾರ್ಯಕ್ರಮಗಳಿಗೆ ಸರಕಾರ ತನ್ನ ಸಹಾಯ ಹಸ್ತವನ್ನು ಚಾಚಬೇಕು ಎಂದರು.
ಹಿರಿಯ ತಾಳಮದ್ದಳೆ ಅರ್ಥಧಾರಿ ಕುತ್ಲೋಡಿ ವಾಸು ಶೆಟ್ಟಿ ಹಾಗೂ ಬಡಗುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥ ಅವರಿಗೆ ದಿ. ಕೆ. ಸುಂದರ ಶೆಟ್ಟಿ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿ. ಕೆ. ಸುಂದರ ಶೆಟ್ಟಿ ಅವರ ಸಂಸ್ಮರಣೆಯನ್ನು ಹಿರಿಯ ಕಲಾವಿದ ಶ್ರೀಧರ ಹಂದೆ ನೆರವೇರಿಸಿದರು.
ನಗರಸಭೆ ಅಧ್ಯಕ್ಷ ಯುವರಾಜ್ ಪುತ್ತೂರು, ಶಾಸಕ ಪ್ರಮೋದ್ ಮಧ್ವರಾಜ್, ಸಂಸ್ಥೆಯ ಗೌರವಾಧ್ಯಕ್ಷ ಮನೋಹರ ಶೆಟ್ಟಿ , ಬೆಂಗಳೂರಿನ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ, ದಿ. ಕೆ. ಸುಂದರ ಶೆಟ್ಟಿ ಅವರ ಜೇಷ್ಠ ಪುತ್ರ ರವಿ ಶೆಟ್ಟಿ, ಸಂಘಟನೆಯ ಕಾರ್ಯದರ್ಶಿ ಮಹಾಬಲ ಕುಂದರ್, ಸಿ.ಎ. ದೇವಾನಂದ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಬನ್ನಾಡಿ ಶೇಷಪ್ಪ ಶೆಟ್ಟಿ ಸ್ವಾಗತಿಸಿ, ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಕೃಪೆ : http://www.http://vijaykarnataka.indiatimes.com/
|
|
|